ಗುರುವಾರ, ಫೆಬ್ರವರಿ 21, 2019

ಬಾಣಂತಿ ಕಟ್ನೆ :

  ಇವತ್ತು ಬಾಣಂತಿಗೆ ಊಟಕ್ಕೆ ಮಾಡುವ ಕಟ್ನೆಯ ಬಗ್ಗೆ ತಿಳಿಯೋಣ. ಕಟ್ನೆ ಎಂದರೆ ಅನ್ನದ ಜೊತೆ ತಿನ್ನುವ ಗೊಜ್ಜಿನಂಥ ಒಂದು ಪದಾರ್ಥ. ಕನ್ನೆ ಕುಡಿ / ಸೊರ್ಲೆ ಕುಡಿ ಅಥವಾ ಎಲವರಿಗೆ ಕುಡಿ ಬಳಸಿ ಕಟ್ನೆ ಮಾಡುತ್ತಾರೆ, ಇದು ಎಲ್ಲರೂ ತಿನ್ನುವ ಪದಾರ್ಥ. ನಾ ಈಗ ಹೇಳ ಹೊರಟಿರುವುದು ಬಾಣಂತಿಗಾಗಿ ಮಾಡುವ ಸರ್ವ ಕುಡಿಗಳ ಕಟ್ನೆ. ಹಲವಾರು ಔಷಧಿಯುಕ್ತ ಕುಡಿಗಳನ್ನು ಹಾಕಿ ಇದನ್ನು ಮಾಡುತ್ತಾರೆ. ಶೀತ, ವಾತ ತಡೆಯಲು, ಮೈ ಕೈ ನೋವು ಕಮ್ಮಿಯಾಗಲು, ರೋಗ ನಿರೋಧಕ ಶಕ್ತಿಗೆ ಹೀಗೆ ಹಲವಾರು ಕಾರಣಗಳಿಗೆ ಒಟ್ಟಿನಲ್ಲಿ ಬಾಣಂತಿಗೆ ಶಕ್ತಿ ವರ್ಧಕವಾಗಿ ಈ ಹಸಿರು ಕುಡಿಗಳ ಕಟ್ನೆ ಸಹಾಯಕ. ಇವುಗಳಲ್ಲಿ ಎಷ್ಟು ಕುಡಿಗಳ ಲಭ್ಯತೆಯಿದೆಯೋ ಅಷ್ಟನ್ನು ನೀವು ಹಾಕಿಕೊಳ್ಳಬಹುದು. ನನ್ನ ಅಮ್ಮ ಇದನ್ನು ಮಾಡುವ ಸಂದರ್ಭದಲ್ಲಿ ಎಲವರಿಗೆ ಕುಡಿ, ದಾಳಿಂಬೆ ಕುಡಿ, ಮದರಂಗಿ ಕುಡಿಗಳು ಲಭ್ಯವಾಗಿಲ್ಲದ ಕಾರಣ ಅವುಗಳ ಫೋಟೋ ನನ್ನ ಬಳಿ ಇಲ್ಲ. ನೀವು ಇವುಗಳನ್ನೂ ಸೇರಿಸಿ ಮಾಡಿಕೊಳ್ಳಿ. ಬಾಣಂತಿಗೆ ಹಸಿ ತೆಂಗಿನ ಕಾಯಿ ಬಳಸಬಾರದು. ಒಣ ಕೊಬ್ಬರಿಯನ್ನೇ ಹಾಕಬೇಕು. 

ಸಾಮಗ್ರಿಗಳು :
ಕನ್ನೇ ಕುಡಿ (ಸೊರ್ಲೆ ಕುಡಿ) : 2 ಮುಷ್ಠಿ
ಎಲವರಿಗೆ ಕುಡಿ : 1 ಮುಷ್ಠಿ 
ಮದರಂಗಿ ಕುಡಿ : 2 
ದಾಳಿಂಬೆ ಕುಡಿ : 2 
ಪುನ್ನಾಗ ಕುಡಿ : 2
ಗೆಂಟಿಗೆ ಕುಡಿ : 2
ಮುಂಬೈ ಮಲ್ಲಿಗೆ ಕುಡಿ : 2
ವಾತಂಗಿ ಕುಡಿ : 4-5
ಶುಗರ್ ಸೊಪ್ಪು : 2 
ಸೂಜಿ ಮೆಣಸು ಕುಡಿ : 2
ಅಬ್ಬಲಿಗೆ / ಕನಕಾಂಬರ ಕುಡಿ : 2
ಗಣಿಕೆ ಕುಡಿ : 2
ತುಳಸಿ ಕುಡಿ : 2
ಅಗಸೆ ಕುಡಿ : 2
ಕಾಳುಮೆಣಸು ಎಲೆ : 2 
ನಾಗವಲ್ಲಿ ಎಲೆ : 2
ಹೊಳೆ (ಗುಡ್ಡೆ) ದಾಸವಾಳ (ಕೇಪುಳ) ಕುಡಿ : 2
ಮುತ್ತು ಮಲ್ಲಿಗೆ ಕುಡಿ : 2
ನಂದಿ ಬಟ್ಟಲು ಕುಡಿ : 2
ಮಧ್ಯಾಹ್ನ ಮಲ್ಲಿಗೆ ಕುಡಿ : 2
ದಾಲ್ಚಿನ್ನಿ ಕುಡಿ : 2 
ದಾಸವಾಳ ಕುಡಿ : 2
ಕಳ್ಳಂ ಕಡ್ಲೆ ಕುಡಿ : 2
ಲಕ್ಕಿ ಕುಡಿ : 2
ಲಿಂಬು ಕುಡಿ : 2
ಸೀಗೆ ಕುಡಿ : 2 
ಚಂದಕಲು ಮುಳ್ಳಿನ ಕುಡಿ : 2
ಕಸುವಿನ ಬಳ್ಳಿ : 2
ಇಲಿ ಕಿವಿ ಸೊಪ್ಪು : 2
ದುಂಡು ಮಲ್ಲಿಗೆ ಕುಡಿ : 2
ರಾಮ ತುಳಸಿ ಕುಡಿ : 2 

ಜೀರಿಗೆ : 3 ಟೇಬಲ್ ಚಮಚ 
ಬೋಳ ಕಾಳು (white pepper) : 1 ಟೇಬಲ್ ಚಮಚ 
ಒಣ ಕೊಬ್ಬರಿ : ಅರ್ಧ  

ವಿಧಾನ :
  ಎಲ್ಲಾ ಕುಡಿಗಳನ್ನು ಹುಳುಗಳಿಲ್ಲದಂತೆ ಸ್ವಚ್ಛ ಮಾಡಿ, ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ ನೀರು ಹಾಕಿ, ಜೀರಿಗೆ, ಬೋಳ ಕಾಳು ಹಾಕಿ 10-15 ನಿಮಿಷ ಚೆನ್ನಾಗಿ ಬೇಯಿಸಿ. ಕೊಬ್ಬರಿಯನ್ನು ಹೆಚ್ಚಿಕೊಳ್ಳಿ ಅಥವಾ ತುರಿದುಕೊಳ್ಳಿ. ಬೇಯಿಸಿದ ಮಿಶ್ರಣ ತಣ್ಣಗಾದ ಮೇಲೆ ಕೊಬ್ಬರಿ ಜೊತೆ ಸೇರಿಸಿ ರುಬ್ಬಿಕೊಳ್ಳಿ. ನಂತರ ನೀರು, ಉಪ್ಪು ಸೇರಿಸಿ ಕುದಿಸಿ. ಹಳೆಯ ಕಾಲದಲ್ಲಿ ಇದನ್ನು ಕಂಚಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ದಿನಾಲೂ  ಕುದಿಸಿ ಇಡುತ್ತಿದ್ದರು. ಐದಾರು ದಿನಗಳವರೆಗೆ ಬಳಸಬಹುದು. ಬೇಕಿದ್ದಲ್ಲಿ ದಿನಾ ಬಡಿಸುವಾಗ ಸ್ವಲ್ಪ ಕಟ್ನೆಗೆ ತುಪ್ಪ, ಜಜ್ಜಿದ ಬೆಳ್ಳುಳ್ಳಿ ಒಗ್ಗರಣೆ ಮಾಡಿ ಹಾಕಬಹುದು. ಅಷ್ಟೂ ಕಟ್ನೆಗೆ ಒಗ್ಗರಣೆ ಮಾಡಿದರೆ ಐದಾರು ದಿನ ರುಚಿಯಾಗಿರುವುದಿಲ್ಲ. 


  ಮೊದಲೇ ತಿಳಿಸಿದಂತೆ ಎರಡು ತುತ್ತು ಅನ್ನಕ್ಕೆ ಜೀರಿಗೆ, ಮೆಣಸಿನ ಪುಡಿ ಹಾಕಿ ಆದ ಮೇಲೆ ಸ್ವಲ್ಪ ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಮತ್ತು ಕಟ್ನೆ ಹಾಕಿ ಊಟ ಬಡಿಸಬೇಕು. ನಂತರ ಸ್ವಲ್ಪೇ ಅನ್ನಕ್ಕೆ ದೊಡ್ಡ ಸೌಟು ಗಟ್ಟಿ ಮೊಸರು ಬಡಿಸಬೇಕು. ಬಡಿಸುವ ಒಂದೇ ಸೌಟು ಬಿಸಿ ಅನ್ನಕ್ಕೆ ಇಷ್ಟೆಲ್ಲಾ ಆಗಬೇಕು ....!! ನೆನಪಿಡಿ ಬಾಣಂತಿಗೆ ಹಸುವಿನ ತುಪ್ಪ - ಹಾಲು - ಮೊಸರು ಶ್ರೇಷ್ಠ. 

  ಕುಡಿಗಳ ಪರಿಚಯಕ್ಕೆ ಫೋಟೋ ಹಾಕಿದ್ದೇನೆ. 





ಶುಕ್ರವಾರ, ಫೆಬ್ರವರಿ 8, 2019

ಹೊಳೆ ದಾಸವಾಳ ಬೇರಿನ ಕಷಾಯ:

   ಹೊಳೆ ದಾಸವಾಳ ಅಥವಾ ಗುಡ್ಡೆ ದಾಸವಾಳ ಎನ್ನುವ ಸಸ್ಯ ಮಲೆನಾಡು ಮತ್ತು ಕರಾವಳಿ ಪ್ರದೇಶಗಲ್ಲಿ ಹೆಚ್ಚಾಗಿ ಸಿಗುವ ಸಸ್ಯ. ಇದರಲ್ಲಿ ಬಿಳಿ ಮತ್ತು ಕೆಂಪು ಜಾತಿಗಳಿವೆ. ಕೆಂಪನೆ ಪುಟ್ಟ, ಸಿಹಿ ಮತ್ತು ಒಗರು ಮಿಶ್ರಿತ ಹಣ್ಣುಗಳಾಗುತ್ತವೆ. (ಕೆಳಗೆ ಹೂವು, ಹಣ್ಣು ಮತ್ತು ಬೇರಿನ ಚಿತ್ರ ಹಾಕಿದ್ದೇನೆ). ಇದರ ಬೇರನ್ನು ಕಿತ್ತು ತಂದು ಚೆನ್ನಾಗಿ ತೊಳೆದು, ಜಜ್ಜಿ ಕಷಾಯ ಮಾಡಿ ಬಾಣಂತಿಗೆ ಕುಡಿಯಲು ಕೊಡುತ್ತಾರೆ.  ಸ್ನಾನ ಮುಗಿಸಿ, ಬೆವರು ಇಳಿಸಿ ಸುಸ್ತಾಗಿ ಬೆಂಕಿ ಕಾಯಿಸುವಾಗ ಕೊಡುವ ಈ ಬಿಸಿ ಬಿಸಿ ಕಷಾಯ ಬಾಳಂತಿಯರಿಗೆ ಅಮೃತ ಕುಡಿದಷ್ಟು ಆನಂದ ನೀಡುತ್ತದೆ. ಅಲ್ಲದೇ ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುವಾಗ ನೀರಿನ ಬದಲು ಈ ಕಷಾಯವನ್ನೇ ಕೊಡಲಾಗುತ್ತದೆ. ನೀರನ್ನು ಜಾಸ್ತಿ ಕುಡಿದರೆ ವಾತ ಎಂದು ಹೇಳಲಾಗುತ್ತದೆ. ಕುಡಿಯುವುದಾದರೂ ಬಿಸಿ ನೀರನ್ನು ಕುಡಿಯಬೇಕು. ತಂಪಾದ ಯಾವುದೇ ಪಾನೀಯ ಬಾಣಂತಿಯರಿಗೆ ವರ್ಜ್ಯ. ಈಗ ಈ ಕಷಾಯ ಮಾಡುವುದನ್ನು ಕಲಿಯೋಣ. 





ಸಾಮಗ್ರಿಗಳು :
ಗುಡ್ಡೆ ದಾಸವಾಳ ಬೇರು - ಒಂದು ಮುಷ್ಠಿ 
ಬೋಳ ಕಾಳು (white pepper) - 1 ಚಮಚ 
ಜೀರಿಗೆ - 2-3 ಚಮಚ 
ನೀರು - 4-5 ಲೀಟರ್ 

ವಿಧಾನ : 
ಮೊದಲು ದಾಸವಾಳ ಬೇರನ್ನು ತೊಳೆದು, ಸ್ವಲ್ಪ ಜಜ್ಜಿಕೊಳ್ಳಿ. ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಳಿದೆಲ್ಲ ಸಾಮಗ್ರಿ ಹಾಕಿ ಕುದಿಸಲು ಇಡಿ. ನೀರು ಕುದಿದು  ಕಾಲು ಭಾಗದಷ್ಟಾದರೂ ಇಂಗಬೇಕು. ಕೆಂಪು ದಾಸವಾಳದ ಬೇರಾದರೆ ಕೆಂಪಗಿನ ಕಷಾಯ ಆಗುತ್ತದೆ. 

ನಂತರ ಉರಿ ಆರಿಸಿ. ಬಾಣಂತಿಗೆ ಕೊಡುವಾಗ ಒಂದು ಕಷಾಯಕ್ಕೆ ಕಾಲು ಲೋಟ ಅಥವಾ ಅದಕ್ಕಿಂತ ಕಮ್ಮಿ ಹಾಲು ಸೇರಿಸಿ ಬಿಸಿ ಬಿಸಿಯಾಗಿ ಕೊಡಿ. ಈ ಕಷಾಯ ಖಾಲಿ ಆಗುವವರೆಗೆ ದಿನಕ್ಕೊಮ್ಮೆ ಕುದಿಸಿ ಇಟ್ಟುಕೊಳ್ಳಿ. ಕುಡಿಯಲು ರುಚಿಯೆನಿಸುವ ಈ ಕಷಾಯ ಬಾಣಂತಿಯ ಬಾಯಾರಿಕೆ ಇಂಗಲು ಸಹಕಾರಿ. ನೆಗಡಿಯಾಗಂತೆ ನೋಡಿಕೊಳ್ಳಲು ಕೂಡ ಸಹಾಯಕ. 


ಬುಧವಾರ, ಫೆಬ್ರವರಿ 6, 2019

ಜೀರಿಗೆ ಮತ್ತು ಕಾಳುಮೆಣಸಿನ ಪುಡಿಗಳು : (ಬಾಣಂತಿಗೆ)

   ತಾಯ್ತನ ಪ್ರತಿ ಹೆಣ್ಣಿನ ಜೀವನದ ಮಹತ್ತರ ಘಟ್ಟ. ತಾಯಿಯಾದರೆ ಮರುಜೀವ ಪಡೆದಂತೆ ಎಂಬ ಮಾತಿದೆ. ಬಾಣಂತನದಲ್ಲಿ ಮೈಯಲ್ಲಿನ ನೀರನ್ನು ಪೂರ್ತಿ ಇಳಿಸಿ, ಮೈ ಇಳಿಸುವ ಪ್ರಕ್ರಿಯೆ ರೂಢಿಯಲ್ಲಿದೆ. ಅಂತೆಯೇ ರಕ್ತ ಕೂಡ ಕಮ್ಮಿಯಾಗುತ್ತದೆ ಬಾಳಂತನದ ಆಹಾರದಲ್ಲಿ. ಮೊದಲು ರಕ್ತ ಶುದ್ಧಿಗೆ ಮದ್ದು ಕೊಟ್ಟು, ತಿಂಗಳ ನಂತರ ರಕ್ತ ವೃದ್ಧಿಗೆ ಲೇಹ್ಯ ಕೊಡುವ ಪದ್ಧತಿ ನಮ್ಮಲ್ಲಿದೆ. ಲೇಹ್ಯಗಳ ತಯಾರಿಕೆಯನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೇನೆ. ಬಾಣಂತನ ಮುಗಿದ ನಂತರ ತಲೆ ಕೂದಲೆಲ್ಲಾ ಉದುರಲಾರಂಬಿಸಿ ಹೊಸ ಕೂದಲು ಬರುತ್ತದೆ. ಅಂತೆಯೇ ಮೈ ಚರ್ಮವೆಲ್ಲಾ ಕಪ್ಪಗಾಗಿ ಮುಂದಿನ ದಿನಗಳಲ್ಲಿ ಹೊಸ ಚರ್ಮ ಕೂಡ ಬರುತ್ತದೆ. ಈ ಬಾಣಂತಿ ಆರೈಕೆ ಒಂದೊಂದು ಊರಿನಲ್ಲಿ ಒಂದೊಂದು ಬಗೆಯದಾಗಿದೆ. ನಮ್ಮ ಊರಿನ ಕಡೆ ಮಲೆನಾಡಿನ ಅತೀ ತಂಪು ಹವಾಮಾನಕ್ಕೆ ತಕ್ಕಂತೆ ಔಷಧ ಪದ್ಧತಿ ರೂಢಿಯಲ್ಲಿದೆ.
   ಇವತ್ತಿನ ಪುಡಿಗಳ ವಿವರಣೆ ಮಗುವಿನ ಜನನದ ನಂತರ ಮೊದಲ ಊಟದಿಂದಲೇ ಬೇಕಾಗುವಂಥದ್ದು. ಆದ್ದರಿಂದ ಹೆರಿಗೆಯ ಒಂದು ವಾರ ಮುಂಚೆಯೇ ಇದನ್ನು ತಯಾರಿಸಿಟ್ಟುಕೊಳ್ಳುತ್ತಾರೆ.

ಮೊದಲಿಗೆ ಜೀರಿಗೆ ಪುಡಿ ಮಾಡುವುದನ್ನು ನೋಡೋಣ. ಇದಕ್ಕೆ ಹಸಿ ಜೀರಿಗೆ - ಬಿಸಿ ಜೀರಿಗೆ ಪುಡಿ ಎಂದು ಹೇಳುತ್ತಾರೆ. ಅಂದರೆ ಹಸಿ ಮತ್ತು ಹುರಿದ ಜೀರಿಗೆ ಎರಡನ್ನೂ ಸೇರಿಸಿ ಪುಡಿ ಮಾಡುವುದು.

ಸಾಮಗ್ರಿಗಳು:
ಜೀರಿಗೆ : 2 ಕಪ್
ತುಪ್ಪ : 1/2 ಚಮಚ


ವಿಧಾನ :
ಬಾಣಲೆಗೆ ತುಪ್ಪ ಹಾಕಿ ಒಂದು ಕಪ್ ಜೀರಿಗೆಯನ್ನು ಹುರಿದುಕೊಳ್ಳಿ. ಇದನ್ನು ಸ್ವಲ್ಪ ಆರಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಜೀರಿಗೆ ಮತ್ತು ಒಂದು ಕಪ್ ಹಸಿ (ಹುರಿಯದೇ ಇರುವ) ಜೀರಿಗೆ ಹಾಕಿ ಪುಡಿ ಮಾಡಿ ಗಾಳಿಯಾಡದ ಡಬ್ಬಿಗೆ ತುಂಬಿಡಿ.

ಈಗ ಕಾಳು ಮೆಣಸಿನ ಪುಡಿ ಮಾಡುವುದನ್ನು ತಿಳಿಯೋಣ. ಇದು ಬಾಣಂತಿಗೆ ಹೆರಿಗೆಯ ನೋವು ಮತ್ತು ಸೊಂಟ, ಬೆನ್ನು ಇತ್ಯಾದಿ ನೋವುಗಳ ಶಮನಕ್ಕೆ, ಥಂಡಿಯಾಗದಿರಲು ಬಹು ಮುಖ್ಯ ಮನೆ ಮದ್ದು.

ಸಾಮಗ್ರಿಗಳು:
ಬಿಳಿ ಕಾಳುಮೆಣಸು (ಬೋಳ ಕಾಳು) : 1 ಕಪ್
ತುಪ್ಪ : 1 ಚಮಚ

ವಿಧಾನ :
 ಬಾಣಲೆಗೆ ತುಪ್ಪ ಹಾಕಿ ಕಾಳುಮೆಣಸು ಹಾಕಿ ಗಮ್ಮೆನ್ನುವಂತೆ ಹುರಿದು ತಣ್ಣಗಾದಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಗಾಳಿಯಾಡದಂತೆ ಡಬ್ಬಿಯಲ್ಲಿ ತುಂಬಿಡಿ.


  ಬಾಣಂತಿಗೆ ಜಾಸ್ತಿ ಊಟವನ್ನು ಕೊಡುವುದಿಲ್ಲ. ಸಹಜ ಹೆರಿಗೆ ಪ್ರಕ್ರಿಯೆಯಲ್ಲಿ ಹೊಟ್ಟೆಯಲ್ಲಿನ ಜೀರ್ಣಾಂಗಗಳು ಸೋತಿರುವುದರಿಂದ ಹೆಚ್ಚು ಮತ್ತು ಗಟ್ಟಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆ ಇರುವುದು ಒಂದು ಕಾರಣವಾದರೆ ಗರ್ಭಿಣಿಯಾದಾಗ ಬಂದ ಮೈ ಇಳಿಸುವುದಕ್ಕೂ ಊಟಕ್ಕೂ ಇರುವ ಸಂಬಂಧ ಮತ್ತೊಂದು ಕಾರಣ! ಆದ್ದರಿಂದ ಬಿಸಿ ಬಿಸಿಯಾದ ಮೆತ್ತಗಿನ ಅನ್ನವನ್ನು ಒಂದು ಸೌಟು ಬಡಿಸಿದರೆ ಅವತ್ತಿನ ಊಟ ಆದಂತೆ! ಅದರಲ್ಲೂ ಹಳೆಯ ಅಕ್ಕಿಯ ಅನ್ನವನ್ನೇ ಮಾಡಬೇಕು. ಮಲೆನಾಡಿನ ಹಳ್ಳಿಗಳಲ್ಲಿ ಕೆಂಪಕ್ಕಿಯ ಅನ್ನವನ್ನು ಮಾಡುತ್ತಾರೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅದರಲ್ಲೂ ಹೊಸ ಅಕ್ಕಿ ಜೀರ್ಣವಾಗುವುದು ತಡವಾಗುತ್ತದೆ ಎಂದು ಈ ಪದ್ಧತಿ. ಈಗ ಈ ಪುಡಿಗಳನ್ನು ಸೇವಿಸುವುದರ ಬಗ್ಗೆ ಹೇಳುತ್ತೇನೆ. ಬಿಸಿ ಬಿಸಿಯಾಗಿ ಬಡಿಸಿದ ಅರ್ಧದಷ್ಟು ಅನ್ನಕ್ಕೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಂಡು ಅದಕ್ಕೆ 1/2 ಚಮಚ ಜೀರಿಗೆ ಪುಡಿ, 1/4 ಚಮಚ ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಕಲೆಸಿ ಮೊದಲು ಉಣ್ಣಬೇಕು. ನಂತರ ಉಳಿದ ಅನ್ನಕ್ಕೆ ಗಟ್ಟಿ ಮೊಸರನ್ನು (ಮಧ್ಯಾಹ್ನವಾದರೆ ಮೊಸರು, ಸಂಜೆ ಆದಲ್ಲಿ ಹಾಲು) ಹಾಕಿ ಉಣ್ಣಬೇಕು. ಹಾಲು, ಮೊಸರು ಎರಡೂ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಈಗಿನ ಕಾಲದ ಔಷಧಿಗಳ ಪವರ್ ಜಾಸ್ತಿ ಇರುವುದರಿಂದ ಹೊಟ್ಟೆ ಉಷ್ಣ ಜಾಸ್ತಿ ಆಗಿ ಮರುದಿನ ಮಲ ವಿಸರ್ಜನೆ ಕಷ್ಟವಾಗಬಾರದೆಂದು ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ತರಕಾರಿಯನ್ನು ಊಟದ ಜೊತೆ ಕೊಡಬಹುದು. ಅದರಲ್ಲೂ ವಾಯು, ನಂಜು ಇರುವಂಥ ತರಕಾರಿಗಳು ವರ್ಜ್ಯ. ಬಿಸಿ ಬಿಸಿ ಹಾಲನ್ನು ಬಾಣಂತಿ ಜಾಸ್ತಿ ಕುಡಿಯಬೇಕು. ಮಗುವಿಗೆ ಚೆನ್ನಾಗಿ ಎದೆ ಹಾಲು ಆಗವಲ್ಲಿ ಇದು ಸಹಾಯಕ. ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಆರೈಕೆ/ ಔಷಧಿಗಳನ್ನು ತಿಳಿಸುತ್ತೇನೆ.....


-ಕಾವ್ಯಾ