ಶುಕ್ರವಾರ, ಜೂನ್ 30, 2017

ಕಳಲೆ ಪಲ್ಯ (bamboo shoot):

ಸಾಮಗ್ರಿಗಳು:
ಸಣ್ಣಗೆ ಹೆಚ್ಚಿಟ್ಟ ಕಳಲೆ - 1 ಬೌಲ್,
ಹಸಿಮೆಣಸು - 4
ಎಣ್ಣೆ - 2 ಟೇ.ಚಮಚ,
ಸಾಸಿವೆ - 1/2 ಟೀ. ಚಮಚ
ಉದ್ದಿನಬೇಳೆ - 1 ಟೀ. ಚಮಚ
ಅರಿಶಿನಪುಡಿ - 1/4 ಟೀ. ಚಮಚ
ಕರಿಬೇವು - 5-6 ಎಲೆಗಳು
ಉಪ್ಪು & ಲಿ೦ಬುರಸ.




ವಿಧಾನ: ಬಾಣಲೆಗೆ ಎಣ್ಣೆಹಾಕಿಕೊ೦ಡು ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು ಕರಿಬೇವು ನ೦ತರ ಅರಿಶಿನಪುಡಿ ಹಾಕಿ. ಈಗ ಹೆಚ್ಚಿಟ್ಟ ಕಳಲೆಯನ್ನು ಹಾಕಿ ಉಪ್ಪು ಲಿ೦ಬುರಸ ಹಾಕಿ 15- 20 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದರೆ ರುಚಿಯಾದ ಕಳಕೆ ಪಲ್ಯ ಸವಿಯಲು ಸಿದ್ಧ.

(ಕಳಲೆಯನ್ನು ಹೆಚ್ಚಿ ೨ ದಿನ ನೀರಲ್ಲಿ ನೆನೆಸಿಡಬೇಕು. ದಿನಾಲೂ ನೀರು ಬದಲಿಸಬೇಕು)

ಶುಕ್ರವಾರ, ಜೂನ್ 23, 2017

ರಸ್ಮಲಾಯಿ :

ಸಾಮಗ್ರಿಗಳು :
ಬಾಸುಂದಿಗೆ (ರಸ)-
ಹಾಲು : 1.5 ಲೀಟರ್
ಸಕ್ಕರೆ : 1/2 ಕೆಜಿ
ಪಿಸ್ತಾ - ಬಾದಾಮ್ ಚೂರುಗಳು : 1/4 ಕಪ್

ರಸಗುಲ್ಲ (ಪನೀರ್ ಉಂಡೆ) ಗೆ :
ಹಾಲು : 2 ಲೀಟರ್
ವಿನೆಗರ್ : 1.5 ಚಮಚ (ಅಥವಾ ನಿಂಬೆ ರಸ : ೩-೪ ಚಮಚ)
ಸಕ್ಕರೆ : 1 ಕಪ್
ನೀರು : 3 ಕಪ್

ವಿಧಾನ :
ಮೊದಲು 2 ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ವಿನೆಗರ್ ಹಾಕಿ ಚೆನ್ನಾಗಿ ಕಲಕಿ. ಹಾಲು ಪೂರ್ತಿಯಾಗಿ ಒಡೆಯದಿದ್ದಲ್ಲಿ ಇನ್ನು ಸ್ವಲ್ಪ ವಿನೆಗರ್ ಸೇರಿಸಿ ಕಲಕಿ. ವಿನೆಗರ್ ಬದಲು ಲಿಂಬುರಸ ಬಳಸಬಹುದು. ಒಂದು ಪಾತ್ರೆಯ ಮೇಲೆ ಜರಡಿ ಇಟ್ಟು ಅದರ ಮೇಲೆ ತೆಳ್ಳನೆಯ ಹತ್ತಿ ಬಟ್ಟೆ ಹಾಕಿ, ಒಡೆದ ಹಾಲನ್ನು ಬಟ್ಟೆಯ ಮೇಲೆ ಹಾಕಿ ಮೇಲಿನಿಂದ ನೀರನ್ನು ಹಾಕುತ್ತಾ ಚಮಚದಿಂದ ಕಲಕಿ. 

ಹಾಲಿಗೆ ಹುಳಿ ಹಾಕಿದ್ದರಿಂದ ನೀರನ್ನು ಹಾಕಿ ಹುಳಿ ಅಂಶ ತೆಗೆಯಬೇಕು. ನಂತರ ಬಟ್ಟೆಯನ್ನು ಗಂಟು ಕಟ್ಟಿ ಅದರ ಮೇಲೆ ಏನಾದರೂ ಭಾರ ಹೇರಿಟ್ಟು ಸ್ವಲ್ಪ ಹೊತ್ತು ಬಿಡಿ. ನೀರಿನಂಶ ಪೂರ್ತಿ ಇಳಿದು ಬರಿಯ ಪನೀರ್ ಉಳಿದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ನಾದಬೇಕು. 

ನಂತರ ಇದರಿಂದ ದೊಡ್ಡ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿ ಅದನ್ನು ತಟ್ಟಿ ಚಪ್ಪಟೆ ಮಾಡಿ ಇಟ್ಟುಕೊಳ್ಳಿ.

 3-4 ಚಮಚ ಹಾಲಿನಲ್ಲಿ ಕುಂಕುಮ ಕೇಸರಿ ಹಾಕಿ ನೆನೆಸಿಡಿ.

ಈಗ ಒಂದು ಕಡೆ 1.5 ಲೀಟರ್ ಹಾಲಿಗೆ 1/2 ಕೆಜಿ ಯಷ್ಟು ಸಕ್ಕರೆ (ನಿಮಗೆ ಬೇಕಾದ  ಸಿಹಿ ಪ್ರಮಾಣಕ್ಕೆ ಅನುಸಾರ) ಹಾಕಿ ಹಾಲು ಸುಮಾರು ಅರ್ಧದಷ್ಟು ಕಮ್ಮಿ ಆಗುವವರೆಗೆ ಕುದಿಸಿ. ಉರಿ ಆರಿಸಿ ಕೇಸರಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಿ.

ಇತ್ತ  1 ಕಪ್ ಸಕ್ಕರೆಗೆ 3 ಕಪ್ ನಷ್ಟು ನೀರು ಹಾಕಿ ಕುದಿಸಿ, ಮಾಡಿಟ್ಟುಕೊಂಡ ಪನೀರ್ ಉಂಡೆಯನ್ನು ಹಾಕಿ 8-10 ನಿಮಿಷ ಕುದಿಸಿ. ಉಂಡೆಯ ಗಾತ್ರ ದೊಡ್ಡದಾಗುತ್ತದೆ ಆಗ ಉರಿ ಆರಿಸಿ ಉಂಡೆಗಳನ್ನು ಪಾಕದಿಂದ ತೆಗೆದು ಬಿಸಿ ಆರಿದ ಒಂದೊಂದೇ ಉಂಡೆ ತೆಗೆದುಕೊಂಡು ಕೈ ಇಂದ ಒತ್ತಿ ಸಕ್ಕರೆ ನೀರು ತೆಗೆದು ಇಟ್ಟುಕೊಳ್ಳಿ.

ಈಗ ತಣ್ಣಗಾದ ಹಾಲಿನ ಮಿಶ್ರಣಕ್ಕೆ ಮಾಡಿಟ್ಟ ಉಂಡೆಗಳನ್ನು ಹಾಕಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ - ಪಿಸ್ತಾ ಚೂರುಗಳನ್ನು ಹಾಕಿ 1-2 ಘಂಟೆ ಫ್ರಿಡ್ಜ್ ಅಲ್ಲಿ ಇಟ್ಟು , ತಣ್ಣನೆಯ ರಸ್ಮಲಾಯಿ ಸವಿಯಿರಿ. 



ಶುಕ್ರವಾರ, ಜೂನ್ 16, 2017

ಕ೦ಚುಳಿ :

ಸಾಮಗ್ರಿಗಳು : 
ಹುಳಿಕ೦ಚಿಕಾಯಿ (ಹೇರಳೇಕಾಯಿ)- 3,
ಸೂಜಿಮೆಣಸು / ಹಸಿಮೆಣಸು - 6-7
ಬೆಲ್ಲ - 2 ಟೇ.ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 1ಟೀ. ಚಮಚ
ಸಾಸಿವೆ - 1/2 ಚಮಚ
ಬೆಳ್ಳುಳ್ಳಿ - 5 ಎಸಳು

 

ವಿಧಾನ : ಕ೦ಚಿಕಾಯಿಯ ಸಿಪ್ಪೆ ತೆಗೆದು ಅರ್ಧ ಮಾಡಿ ಒ೦ದು ಪಾತ್ರೆಯಲ್ಲಿ ಸಲ್ಪ ಉಪ್ಪು ಹಾಕಿ ಅದಕ್ಕೆ ಕ೦ಚಿಕಾಯಿ ರಸವನ್ನು ಹಿ೦ಡಿ, ಅದಕ್ಕೆ ಬೆಲ್ಲ ಹಾಕಿ ರುಚಿನೋಡಿಕೊಳ್ಳಿ. ಸೂಜಿಮೆಣಸು & ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಅದು ಸ್ವಲ್ಪ ಕಾದಮೇಲೆ ಸಾಸಿವೆ ಜಜ್ಜಿಟ್ಟ ಸೂಜಿಮೆಣಸು & ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ ಇದನ್ನು ಕ೦ಚಿಕಾಯಿರಸಕ್ಕೆ ಸೇರಿಸಿ. ಇದನ್ನು ಅನ್ನದ ಜೊತೆ ಸವಿಯಿರಿ.

(ಸೂಚನೆ: ಕ೦ಚಿಕಾಯಿರಸಕ್ಕೆ ನೀರು ಸೇರಿಸುವ ಅಗತ್ಯವಿಲ್ಲ, ಹುಳಿಗೆ ತಕ್ಕಷ್ಟು ಖಾರ & ಬೆಲ್ಲ ಬೇಕು)

ಶುಕ್ರವಾರ, ಜೂನ್ 9, 2017

ಕ್ಯಾರಟ್ - ಸೇಬಿನ ಸೂಪ್ (carrot - apple soup):

ಆರೋಗ್ಯಕರವಾಗಿ ಮಕ್ಕಳನ್ನು ಬೆಳೆಸುವುದು ಪ್ರತಿ ತಾಯಂದಿರ ಕರ್ತವ್ಯ. ಇದಕ್ಕಾಗಿ ರೆಡಿಮೇಡ್ ಆಹಾರಗಳಿಗಿಂತ ಮನೆಯಲ್ಲಿಯೇ ಸರಳವಾಗಿ ಮಾಡಿಕೊಡಬಹುದಾದ ಆಹಾರಗಳನ್ನು ತಿಳಿಸಿಕೊಡಲು 'ಶಿಶು / ಮಕ್ಕಳ ಆಹಾರ' ಎಂಬ ಹೊಸ ಅಂಕಣ ಆರಂಭಿಸಿದ್ದೇವೆ. ನಮಗೆ ತಿಳಿದಷ್ಟನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ. 

ಸಾಮಗ್ರಿಗಳು :

ಹೆಚ್ಚಿದ ಕ್ಯಾರಟ್- 1/4 ಕಪ್ 
ಹೆಚ್ಚಿದ ಸೇಬು - 1/4 ಕಪ್
ಹೆಚ್ಚಿದ ಆಲೂ - 1/4 ಕಪ್
ಹೆಚ್ಚಿದ ಈರುಳ್ಳಿ - 1/4 ಕಪ್
ಬೆಣ್ಣೆ - 1/2 ಟೀ ಚಮಚ 
ಪೆಪ್ಪರ್ ಪೌಡರ್ - 2 ಚಿಟಿಕೆ 
ಲಿಂಬೆ ರಸ - 5-6 ಹನಿ 
ಉಪ್ಪು - 3-4 ಚಿಟಿಕೆ 

ವಿಧಾನ :
ಹೆಚ್ಚಿದ  ಸೇಬು-ತರಕಾರಿಗಳೆಲ್ಲವನ್ನೂ ಒಟ್ಟಿಗೇ ಕುಕ್ಕರ್ ನಲ್ಲಿ ಮೂರು ವಿಷಲ್ ಕೂಗಿಸಿ ಬೇಯಿಸಿಕೊಳ್ಳಿ. ಬೆಂದು ತಣ್ಣಗಾದ ಮೇಲೆ  ಮಿಕ್ಸಿಗೆ ಹಾಕಿ  ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್ ಗೆ ಬೆಣ್ಣೆ ಹಾಕಿ, ಪೆಪ್ಪರ್ ಪುಡಿ ಹಾಕಿ ಒಮ್ಮೆ ಕಲಕಿ, ರುಬ್ಬಿದ ಮಿಶ್ರಣ ಹಾಕಿ  ಕಾಲು ಕಪ್ ನಷ್ಟು ನೀರು ಹಾಕಿ ಕಲಕಿ. ಬೇಕಿದ್ದಲ್ಲಿ ಇನ್ನು ಸ್ವಲ್ಪ ನೀರು ಸೇರಿಸಿ. ಉಪ್ಪು ಹಾಕಿ ಒಂದು ಕುದಿ ಕುದಿಸಿ (ಮುಂಚೆಯೇ ಬೇಯಿಸಿಕೊಂಡ ಸೇಬು / ತರಕಾರಿ ಆದ್ದರಿಂದ ಸಣ್ಣ ಕುದಿ ಬಂದರೆ ಸಾಕು). ಕೊನೆಯಲ್ಲಿ ಲಿಂಬು ರಸ ಹಾಕಿದರೆ ರುಚಿಯಾದ ಸೂಪ್ ಸಿದ್ಧ. ಸ್ವಲ್ಪ ಬೆಚ್ಚಗಿರುವಾಗಲೇ ಮಕ್ಕಳಿಗೆ ಕುಡಿಸಿ. 


ಸಲಹೆಗಳು :
1) 7-8 ತಿಂಗಳು ಮೇಲ್ಪಟ್ಟ ಮಗುವಿಗೆ ಒಳ್ಳೆಯ ಆರೋಗ್ಯಕರ ಆಹಾರ. ಶಾಲೆಗೆ ಹೋಗುವ ಮಕ್ಕಳಿಗೂ ಇಷ್ಟವಾಗುವುದಲ್ಲದೇ ದೊಡ್ಡವರೂ ಸವಿಯಬಹುದು. 
2) ತೀರಾ ತೆಳ್ಳಗಾಗುವಷ್ಟು ನೀರು ಹಾಕಬೇಡಿ, ರುಚಿಯಿರುವುದಿಲ್ಲ. 
3) ಮಗುವಿಗೆ  ಕೊಡುವಾಗ ಉಪ್ಪು, ಹುಳಿ, ಖಾರ ಎಲ್ಲವೂ ಕಡಿಮೆ ಇರುವಂತೆ ಎಚ್ಚರ ವಹಿಸಿ. ಅದಕ್ಕೆ ಎಲ್ಲವನ್ನೂ  ಕಡಿಮೆ ಪ್ರಮಾಣದಲ್ಲೇ ಹೇಳಿದ್ದೇನೆ. ದೊಡ್ಡ ಮಕ್ಕಳಿಗಾದರೆ ಅವರ ಇಷ್ಟಕ್ಕನುಸಾರ  ಜಾಸ್ತಿ ಮಾಡಿಕೊಳ್ಳಿ.  
4) ಎಲ್ಲಾ ತರಕಾರಿಗಳು ಸಮಪ್ರಮಾಣದಲ್ಲಿದ್ದರೆ ರುಚಿ ಚೆನ್ನಾಗಿರುತ್ತದೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಯಾವುದೇ ತೊಂದರೆಯಿಲ್ಲ 

ಶುಕ್ರವಾರ, ಜೂನ್ 2, 2017

ಮುರುಗಲು ಸಿಪ್ಪೆಯ ತ೦ಬುಳಿ:

ಸಾಮಗ್ರಿಗಳು : 
ಮುರುಗಲು ಸಿಪ್ಪೆ - 6-7
 ಕಾಯಿತುರಿ - 2 ಟೇ.ಚಮಚ
ಎಣ್ಣೆ - 1ಟೀ. ಚಮಚ
ಸಾಸಿವೆ - 1/2 ಚಮಚ
ಜೀರಿಗೆ  - 1/2 ಚಮಚ
ಒಣಮೆಣಸು -1
ಕರಿಬೇವು - 4-5 ಎಲೆಗಳು
ಉಪ್ಪು, ಸಕ್ಕರೆ - ರುಚಿಗೆ ತಕ್ಕಷ್ಟು






ವಿಧಾನ:ಒಣಗಿಸಿಟ್ಟ ಮುರುಗಲು ಸಿಪ್ಪೆಯನ್ನು 15-20 ನಿಮಿಷ ನೀರಿನಲ್ಲಿ ನೆನೆಸಿಡಿ. ತೆ೦ಗಿನಕಾಯಿಯನ್ನು ತುರಿದುಕೊ೦ಡು, ಸ್ವಲ್ಪ ನೀರು ಹಾಕಿ ರುಬ್ಬಿ ಅದರಿ೦ದ ತೆ೦ಗಿನ ಹಾಲನ್ನು ತೆಗೆದು ಮುರುಗಲು ಸಿಪ್ಪೆ ನೆನೆಸಿದ ನೀರಿಗೆ ಸೇರಿಸಿ. ಈಗ ಇದಕ್ಕೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಹಾಕಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಅದಕ್ಕೆ ಜೀರಿಗೆ, ಸಾಸಿವೆ,ಒಣಮೆಣಸು, ಕರಿಬೇವು ಹಾಕಿ, ಚಿಟಪಟಿಸಿದ ಮೇಲೆ ಈ ಒಗ್ಗರಣೆ ಹಾಕಿದರೆ ಮುರುಗಲು ಸಿಪ್ಪೆಯ ತ೦ಬುಳಿ ಸಿದ್ಧ. ಇದನ್ನು ಅನ್ನದ ಜೊತೆ ತಿನ್ನಬಹುದು ಹಾಗೆ ಕುಡಿಯಲು ರುಚಿಕಟ್ಟಾಗಿರುತ್ತದೆ.

(ಮುಗುಗಲು (ಪುನರ್ಪುಳಿ) ಸಿಪ್ಪೆಯು ಪಿತ್ತ ಶಮನಕಾರಿಯು ಹೌದು)