ಶುಕ್ರವಾರ, ಜೂನ್ 23, 2017

ರಸ್ಮಲಾಯಿ :

ಸಾಮಗ್ರಿಗಳು :
ಬಾಸುಂದಿಗೆ (ರಸ)-
ಹಾಲು : 1.5 ಲೀಟರ್
ಸಕ್ಕರೆ : 1/2 ಕೆಜಿ
ಪಿಸ್ತಾ - ಬಾದಾಮ್ ಚೂರುಗಳು : 1/4 ಕಪ್

ರಸಗುಲ್ಲ (ಪನೀರ್ ಉಂಡೆ) ಗೆ :
ಹಾಲು : 2 ಲೀಟರ್
ವಿನೆಗರ್ : 1.5 ಚಮಚ (ಅಥವಾ ನಿಂಬೆ ರಸ : ೩-೪ ಚಮಚ)
ಸಕ್ಕರೆ : 1 ಕಪ್
ನೀರು : 3 ಕಪ್

ವಿಧಾನ :
ಮೊದಲು 2 ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ವಿನೆಗರ್ ಹಾಕಿ ಚೆನ್ನಾಗಿ ಕಲಕಿ. ಹಾಲು ಪೂರ್ತಿಯಾಗಿ ಒಡೆಯದಿದ್ದಲ್ಲಿ ಇನ್ನು ಸ್ವಲ್ಪ ವಿನೆಗರ್ ಸೇರಿಸಿ ಕಲಕಿ. ವಿನೆಗರ್ ಬದಲು ಲಿಂಬುರಸ ಬಳಸಬಹುದು. ಒಂದು ಪಾತ್ರೆಯ ಮೇಲೆ ಜರಡಿ ಇಟ್ಟು ಅದರ ಮೇಲೆ ತೆಳ್ಳನೆಯ ಹತ್ತಿ ಬಟ್ಟೆ ಹಾಕಿ, ಒಡೆದ ಹಾಲನ್ನು ಬಟ್ಟೆಯ ಮೇಲೆ ಹಾಕಿ ಮೇಲಿನಿಂದ ನೀರನ್ನು ಹಾಕುತ್ತಾ ಚಮಚದಿಂದ ಕಲಕಿ. 

ಹಾಲಿಗೆ ಹುಳಿ ಹಾಕಿದ್ದರಿಂದ ನೀರನ್ನು ಹಾಕಿ ಹುಳಿ ಅಂಶ ತೆಗೆಯಬೇಕು. ನಂತರ ಬಟ್ಟೆಯನ್ನು ಗಂಟು ಕಟ್ಟಿ ಅದರ ಮೇಲೆ ಏನಾದರೂ ಭಾರ ಹೇರಿಟ್ಟು ಸ್ವಲ್ಪ ಹೊತ್ತು ಬಿಡಿ. ನೀರಿನಂಶ ಪೂರ್ತಿ ಇಳಿದು ಬರಿಯ ಪನೀರ್ ಉಳಿದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ನಾದಬೇಕು. 

ನಂತರ ಇದರಿಂದ ದೊಡ್ಡ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿ ಅದನ್ನು ತಟ್ಟಿ ಚಪ್ಪಟೆ ಮಾಡಿ ಇಟ್ಟುಕೊಳ್ಳಿ.

 3-4 ಚಮಚ ಹಾಲಿನಲ್ಲಿ ಕುಂಕುಮ ಕೇಸರಿ ಹಾಕಿ ನೆನೆಸಿಡಿ.

ಈಗ ಒಂದು ಕಡೆ 1.5 ಲೀಟರ್ ಹಾಲಿಗೆ 1/2 ಕೆಜಿ ಯಷ್ಟು ಸಕ್ಕರೆ (ನಿಮಗೆ ಬೇಕಾದ  ಸಿಹಿ ಪ್ರಮಾಣಕ್ಕೆ ಅನುಸಾರ) ಹಾಕಿ ಹಾಲು ಸುಮಾರು ಅರ್ಧದಷ್ಟು ಕಮ್ಮಿ ಆಗುವವರೆಗೆ ಕುದಿಸಿ. ಉರಿ ಆರಿಸಿ ಕೇಸರಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಿ.

ಇತ್ತ  1 ಕಪ್ ಸಕ್ಕರೆಗೆ 3 ಕಪ್ ನಷ್ಟು ನೀರು ಹಾಕಿ ಕುದಿಸಿ, ಮಾಡಿಟ್ಟುಕೊಂಡ ಪನೀರ್ ಉಂಡೆಯನ್ನು ಹಾಕಿ 8-10 ನಿಮಿಷ ಕುದಿಸಿ. ಉಂಡೆಯ ಗಾತ್ರ ದೊಡ್ಡದಾಗುತ್ತದೆ ಆಗ ಉರಿ ಆರಿಸಿ ಉಂಡೆಗಳನ್ನು ಪಾಕದಿಂದ ತೆಗೆದು ಬಿಸಿ ಆರಿದ ಒಂದೊಂದೇ ಉಂಡೆ ತೆಗೆದುಕೊಂಡು ಕೈ ಇಂದ ಒತ್ತಿ ಸಕ್ಕರೆ ನೀರು ತೆಗೆದು ಇಟ್ಟುಕೊಳ್ಳಿ.

ಈಗ ತಣ್ಣಗಾದ ಹಾಲಿನ ಮಿಶ್ರಣಕ್ಕೆ ಮಾಡಿಟ್ಟ ಉಂಡೆಗಳನ್ನು ಹಾಕಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಬಾದಾಮ್ - ಪಿಸ್ತಾ ಚೂರುಗಳನ್ನು ಹಾಕಿ 1-2 ಘಂಟೆ ಫ್ರಿಡ್ಜ್ ಅಲ್ಲಿ ಇಟ್ಟು , ತಣ್ಣನೆಯ ರಸ್ಮಲಾಯಿ ಸವಿಯಿರಿ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ