ಶುಕ್ರವಾರ, ಡಿಸೆಂಬರ್ 29, 2017

ಹಲಸಿನ ಗುಜ್ಜೆ ಕರ್ರಿ (ಎಳೆ ಹಲಸಿನಕಾಯಿ ಮಸಾಲಾ ಸಾಂಬಾರ್) :

ಎಳೆ ಹಲಸಿನಕಾಯಿ / ಹಲಸಿನ ಗುಜ್ಜೆಯನ್ನು ಕತ್ತರಿಸಿ ಸಿಪ್ಪೆ ತೆಗೆದು, ಮಧ್ಯದ ಮೂಗು (ಗಟ್ಟಿ ಭಾಗ) ತೆಗೆದು (ಚಿತ್ರದಲ್ಲಿರುವಂತೆ) ಉದ್ದುದ್ದ ಹೋಳು ಮಾಡಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಸಾಂಬಾರ್ ಗೆ ಬೇಕಾದಂತೆ ಹೆಚ್ಚಿಕೊಳ್ಳಿ. 


ಸಾಮಗ್ರಿಗಳು : 
ಬೇಯಿಸಿದ ಹಲಸಿನ ಗುಜ್ಜೆ ಹೋಳು :3 ಕಪ್ 
ತೆಂಗಿನ ತುರಿ :1.5 ಕಪ್ 
ಒಣ ಮೆಣಸಿನಕಾಯಿ : 6-7 
ಕೊತ್ತಂಬರಿ ಬೀಜ : 1.5 ಚಮಚ 
ಜೀರಿಗೆ : 3/4 ಚಮಚ 
ಉದ್ದಿನ ಬೇಳೆ : 1/4 ಚಮಚ 
ಬಿಳಿ ಎಳ್ಳು : 1/4 ಚಮಚ 
ಚಕ್ಕೆ : 1/2 ಇಂಚು 
ಲವಂಗ : 3
ಹೆಚ್ಚಿದ ಕೊತ್ತಂಬರಿ ಸೊಪ್ಪು : 4 ಟೇಬಲ್ ಚಮಚ 
ಬೆಳ್ಳುಳ್ಳಿ : 5-6 ಎಸಳು 
ಶುಂಠಿ : 1/2 ಇಂಚು 
ಈರುಳ್ಳಿ : 1 
ಹುಣಸೆಹಣ್ಣು : ಸಣ್ಣ ಲಿಂಬೆ ಗಾತ್ರ 
ಎಣ್ಣೆ : 8-10 ಚಮಚ 
ಉಪ್ಪು : ರುಚಿಗೆ 

ವಿಧಾನ :
ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಹುಣಸೆಹಣ್ಣು ನೀರಿನಲ್ಲಿ ನೆನೆಸಿಕೊಳ್ಳಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ಅದಕ್ಕೆ ಒಣಮೆಣಸಿನಕಾಯಿ, ಉದ್ದಿನಬೇಳೆ,  ಕೊತ್ತಂಬರಿ ಬೀಜ, ಜೀರಿಗೆ, ಚಕ್ಕೆ, ಲವಂಗ, ಎಳ್ಳು ಹಾಕಿ ಹದವಾಗಿ ಹುರಿದುಕೊಳ್ಳಿ. ಕೊನೆಯಲ್ಲಿ ತೆಂಗಿನತುರಿಯನ್ನೂ ಸೇರಿಸಿ ಹುರಿದರೆ ರುಚಿ ಚೆನ್ನಾಗಿರುತ್ತದೆ. ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ, ಶುಂಠಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಉಳಿದ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಇತ್ತ ಹುರಿದ ಮಿಶ್ರಣ, ತೆಂಗಿನತುರಿ, ನೆನೆಸಿಟ್ಟ ಹುಣಸೆಹಣ್ಣು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈರುಳ್ಳಿ ಮಿಶ್ರಣ ಫ್ರೈ ಆದಮೇಲೆ ಅದಕ್ಕೆ ಬೇಯಿಸಿ ಹೆಚ್ಚಿದ ಹಲಸಿನ ಗುಜ್ಜೆ ಹೋಳು, ಉಪ್ಪು, ರುಬ್ಬಿದ ಮಸಾಲೆ  ಹಾಕಿ ಸಾಂಬಾರ್ ಹದಕ್ಕೆ ನೀರು ಸೇರಿಸಿ ಕುದಿಸಿದರೆ ಗುಜ್ಜೆ ಕರ್ರಿ ಸಿದ್ಧ. ಬಿಸಿ ಬಿಸಿ ಅನ್ನದ ಜೊತೆ ಚೆನ್ನಾಗಿರುತ್ತದೆ. ದೋಸೆ, ಚಪಾತಿಯ ಜೊತೆಯೂ ಸವಿಯಬಹುದು. 





2 ಕಾಮೆಂಟ್‌ಗಳು: